ಶನಿವಾರ, ಫೆಬ್ರವರಿ 2, 2008

ಕೆಂಪಕ್ಕಿ(ಕಜಾಯ ಅಕ್ಕಿ) ಮತ್ತು ಅದರ ತಿನಿಸುಗಳು

ಭತ್ತ/ಕೆಂಪಕ್ಕಿ

ಭತ್ತದಿಂದ ಅಕ್ಕಿ, ಅಕ್ಕಿಯಿಂದ ಅನ್ನ, ಆಹಾರಕ್ಕೆ ಪರ್‍ಯಾಯ ಪದವೇ ಅನ್ನ. ದಕ್ಷಿಣ ಭಾರತದಲ್ಲಿ ನಾವು ಹೆಚ್ಚು ಉಪಯೋಗಿಸುವ ಆಹಾರವೇ ಅನ್ನ. ಹಿಂದೆ ಒಬ್ಬನ ಶಕ್ತಿಯನ್ನು ಅಳೆಯುತ್ತಿದ್ದುದೇ ಅವನು ತಿನ್ನುವ ಅನ್ನದ ಅಳತೆಯಿಂದ. "ಪಾವಕ್ಕಿ ತಿಂದು ಅರಗಿಸಿಕೊಳ್ಳುತ್ತಾನೆ, ಸೇರಕ್ಕಿ ತಿಂದು ಅರಗಿಸಿಕೊಳ್ಳುತ್ತಾನೆ." ನಾವು ಮಾಡುತ್ತಿದ್ದ ಹಾಗೂ ಮಾಡುತ್ತಿರುವ ತಪ್ಪು ಇದೇ. ಅವಶ್ಯಕತೆಗಿಂತ ಹೆಚ್ಚು ಅನ್ನವನ್ನು ತಿನ್ನಬಾರದು. ಬಹುಶಃ ಭತ್ತವನ್ನು ಬೆಳೆಯುವ ಕಲೆಯನ್ನು ಕಲಿತ ಮೇಲೆ ದಿನನಿತ್ಯದ ಆಹಾರ ಹುಡುಕಬೇಕಾದ ಕಷ್ಟ ತಪ್ಪಿ ಮನುಷ್ಯ ನಿರಾಳನಾದನೆಂದು ಕಾಣುತ್ತದೆ. ಅದರಿಂದ, ಅನ್ನ ಅವನ ಎಲ್ಲಾ ಆಹಾರಪದಾರ್ಥಗಳಲ್ಲಿ ಮೊದಲ ಸ್ಥಾನ ಪಡೆಯಿತು. ಈಗ ಉಪಯೋಗಿಸುತ್ತಿರುವ ಬಿಳಿಯ ಅಕ್ಕಿ ಯಾವ ಅಳತೆಗೋಲಿನಿಂದಲೂ ಸರಿಯಾದ ಆಹಾರಪದಾರ್ಥವಲ್ಲ. ತೌಡಿನಲ್ಲಿ ಎಲ್ಲಾ ಸತ್ವಗಳು ಹೊರಟುಹೋಗಿರುತ್ತವೆ. ನಾವು ಅಕ್ಕಿ ಎಂದು ಹೇಳಿದರೆ ಅದು ಕೆಂಪಕ್ಕಿಯೇ. ಹಿಂದೆ ಇದರಲ್ಲಿ ಅನೇಕ ತಳಿಗಳಿದ್ದವು. ಈಗ 'ದೇವಮಲ್ಲಿಗೆ' ಎಂಬ ಒಂದೇ ರೀತಿಯ ತಳಿ ಉಳಿದಿದೆ. ಅದನ್ನೂ ಸಹ ಹೆಚ್ಚು ಪಾಲೀಶ್ ಮಾಡಿರುತ್ತಾರೆ. ಹಾಗೆ ಮಾಡದಂತೆ ವಿನಂತಿಸಿಕೊಳ್ಳಬೇಕು. ಅಕ್ಕಿಯನ್ನು ತಿಕ್ಕಿ ತಿಕ್ಕಿ ಅನೇಕ ಸಲ ತೊಳೆಯಬಾರದು. ಧೂಳು ಹೋಗುವಂತೆ ಒಮ್ಮೆ ತೊಳೆದರೆ ಸಾಕು. ಇಲ್ಲದಿದ್ದರೆ ಜೀವಸತ್ವಗಳು ನಷ್ಟವಾಗುತ್ತವೆ. ಗಂಜಿಯನ್ನು ಬಸಿದು ಗಟಾರಕ್ಕೆ ಚೆಲ್ಲಬಾರದು. ಗಂಜಿಯನ್ನು ಇಂಗಿಸಿ ಅನ್ನ ಮಾಡಬೇಕು. ಇಲ್ಲದಿದ್ದರೆ ರೈಸ್ ಕುಕ್ಕರ್‍ನಲ್ಲಿ ಅನ್ನ ಮಾಡಬೇಕು.

ಅಕ್ಕಿಯಲ್ಲಿನ ಆಹಾರ ಸತ್ವಗಳು = ೧೦೦ ಗ್ರಾಂ ನಲ್ಲಿ :
ನೀರು ೧೩.೩%, ಸಸಾರಜನಕ ೭.೫%, ಖನಿಜಗಳು ೦.೯%, ಕ್ಯಾಲ್ಸಿಯಂ ೧೦ ಮಿ.ಗ್ರಾಂ, ನಾರು ೦.೬%, ಪಿಷ್ಟ ೭೬.೭%, ಕ್ಯಾಲೋರಿ ೩೪೬, ರಂಜಕ ಅ೯೦ ಮಿ.ಗ್ರಾಂ, ಕಬ್ಬಿಣ ೩.೨ ಮಿ.ಗ್ರಾಂ, ವಿಟಮಿನ್ 'ಬಿ'

ಅಕ್ಕಿಯನ್ನು ಕ್ರ್‍ಇಸ್ತಪೂರ್ವ ೩೦೦೦ ದಿಂದ ಉಪಯೋಗಿಸುತ್ತಿರುವ ದಾಖಲೆಗಳಿವೆ. ಅಕ್ಕಿ, ರಾಗಿ, ಗೋಧಿ ಮೂರೂ ಪಿಷ್ಟ ಪದಾರ್ಥಗಳೇ ಆದರೂ ಅಕ್ಕಿಯಲ್ಲಿನ ಪಿಷ್ಟದಲ್ಲಿ ಅಮೈಲೋಪೆಕ್ಟಿನ್ ಎಂಬ ಅಂಶ ಹೆಚ್ಚು ಇದೆ. ಇದರಿಂದ ಗೋಧಿ, ರಾಗಿಗಳಿಗಿಂತ ಬೇಗ ಜೀರ್ಣವಾಗುತ್ತದೆ. ಆದ್ದರಿಂದ ಮುದುಕರು, ರೋಗಿಗಳು,ಮಕ್ಕಳಿಗೆ ಅಕ್ಕಿ ಉತ್ತಮ ಆಹಾರ. ಇದರಲ್ಲಿರುವ ಸಸಾರಜನಕದ ಭಾಗ ೭.೫% ಮಾತ್ರ. ಆದರೆ ಇದರಲ್ಲಿಯ ಎಂಟು ಅವಶ್ಯ ಅಮೈನೋ ಆಮ್ಲಗಳಿವೆ. ಇವು ಒಳ್ಳೆಯ ಚರ್ಮ, ಕಣ್ಣಿನ ಹೊಳಪು ಉಂಟುಮಾಡುವುದಲ್ಲದೆ, ಹೃದಯ, ಶ್ವಾಸಕೋಶ, ಮಸ್ತಿಷ್ಕ ಮುಂತಾದುವುಗಳ ಜೀವಕೋಶಗಳನ್ನು ಬೆಳಸುತ್ತವೆ. ಇದರಲ್ಲಿರುವ 'ಬಿ' ಕಾಂಪ್ಲೆಕ್ಸ್, ಥಯಾಮಿನ್, ರಿಬೋಫ್ಲೇವಿನ್ ಮತ್ತು ನಯಾಸಿನ್ ಗಳಿಂದ ಕೂಡಿದೆ. ಇದರಿಂದ ಚರ್ಮದ ಆರೋಗ್ಯ, ನರಗಳು, ಹಾರ್ಮೋನ್, ಇವುಗಳ ಬೆಳವಣಿಗೆಗೆ ಸಹಾಯಕ. ಶರೀರದ ಒಳಗಿನ ನೀರಿನ ಸಮತ್ವವನ್ನು ಕಾಯುತ್ತದೆ. ಕಬ್ಬಿಣವನ್ನು ರಕ್ತಕ್ಕೆ ಕೊಡುವುದರಿಂದ 'ಅನೀಮಿಯ' ಗುಣವಾಗುತ್ತದೆ.

ಆಯುರ್ವೇದ ಅಕ್ಕಿಯ ಬಗ್ಗೆ ಹೀಗೆ ಹೇಳುತ್ತದೆ. ರಕ್ತಶ್ಹಲಿರ್ವರಸ್ತೇಷಾಂ ಬಲ್ಯೋವ್ರಣ ತ್ರಿದೋಷಜಿತ್! ಚಕ್ಷುಷ್ಯೋ ಮೂತ್ರಲಃ ಸ್ವರ್ಯಃ ಶುಕ್ರಲಃ ತೃಟ್ ಜ್ವರಾಪಹಃ-ಕೆಂಪು ಅಕ್ಕಿ ಬೇರೆ ಎಲ್ಲಾ ಅಕ್ಕಿಗಳಿಗಿಂತ ಶ್ರ್‍ಏಷ್ಟವಾದದ್ದು. ಅದು ಬಲಕಾರಿ,ಗಾಯಗಳನ್ನು ವಾಸಿಮಾಡುವುದು. ಮೂತ್ರ ದೋಷಗಳನ್ನೂ ತೆಗೆಯುವುದು, ಕಣ್ಣಿಗೆ ಹಿತಕರ, ಮೂತ್ರವನ್ನು ಸಡಿಲಿಸುವುದು, ಧ್ವನಿಯ ಆರೋಗ್ಯಕ್ಕೆ ಒಳ್ಳೆಯದು, ವೀರ್ಯವರ್ಧಕ, ಅತಿಯಾದ ಬಾಯಾರಿಕೆ, ಜ್ವರವನ್ನು ಕಳೆಯುವುದು. ಈ ಗುಣಗಳಿಂದ ಎಲ್ಲೆಲ್ಲಿ ಅದನ್ನು ಉಪಯೋಗಿಸಬೇಕೆಂದು ಅರಿವಾಗುತ್ತದೆ.

ಕಫದ ಕಾಯಿಲೆಗಳಲ್ಲಿ ಇದು ವರ್ಜ್ಯ. ಮಧುರ ರಸವು ಕಫವನ್ನು ಹೆಚ್ಚಿಸುವುದು. ನೆಗಡಿ, ಕೆಮ್ಮು, ಆಸ್ತಮಾಗಳಲ್ಲಿ ಹೆಚ್ಚು ಬಳಸಬಾರದು. ಅಕ್ಕಿಯಲ್ಲಿ ಕೊಬ್ಬು ಕಡಿಮೆ. ಕೆಂಪಕ್ಕಿಯಲ್ಲಿರುವ ಕ್ಯಾಲ್ಸಿಯಂ ಲವಣವು ನರಗಳ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವುದು. ಆದ್ದರಿಂದ ರಕ್ತದೊತ್ತಡದ ರೋಗಿಗಳಿಗೆ ಉತ್ತಮ ಆಹಾರ. ಜೀರ್ಣಾಂಗಗಳಲ್ಲಿನ ಎಲ್ಲಾ ತೊಂದರೆಗಳಲ್ಲಿ ಅನ್ನವು ಬಹಳ ಉಪಕಾರಿ. ಇದರಲ್ಲಿ ನಾರಿನ ಅಂಶ ಕಡಿಮೆ ಇರುವುದರಿಂದ ಹೊಟ್ಟೆಗೆ ಹಿತಕರ. ಎಲ್ಲಾ ಜೀರ್ಣಾಂಗಗಳ ತೊಂದರೆಯಲ್ಲಿಯೂ ಇದನ್ನು ಉಪಯೋಗಿಸಬಹುದು. ಭೇದಿಯಲ್ಲಿಯೂ ಕೂಡ ಅನ್ನವನ್ನು ಗಂಜಿಯ ರೂಪದಲ್ಲಿ ಕೊಡಬಹುದು.

ಮೇಲೆ ಹೇಳಿದ ಎಲ್ಲಾ ಕಾರಣಗಳಿಂದ ಅನ್ನವು ಶರೀರಕ್ಕೆ ಅನುಕೂಲಕರವೆಂಬುದು ವ್ಯಕ್ತವಾಗುವುದು, ಆದರೆ ಕೆಂಪಕ್ಕಿಯನ್ನು ಉಪಯೋಗಿಸಬೇಕು. ಈ ಅನ್ನವನ್ನೂ ಸಹ ಹೆಚ್ಚು ತರಕಾರಿಗಳ ಜೊತೆ, ಮೊಳಕೆಯ ಕಾಳುಗಳೊಂದಿಗೆ ಸೇವಿಸಬೇಕು. ಜತೆಗೆ ಹಣ್ಣು, ಹಾಲು, ಮೊಸರು ಇತ್ಯಾದಿಗಳಿರಬೇಕು. ಯಾವಾಗಲೂ ಅನ್ನ-ಸಾರು, ಬರೀ ಮೊಸರನ್ನ ಇಷ್ಟನ್ನೇ ಸೇವಿಸುತ್ತಿರಬಾರದು. ಸಮತ್ವದಿಂದ ಕೂಡಿದ್ದಲ್ಲಿ ತೊಂದರೆಯಿರುವುದಿಲ್ಲ. ನಾವು ಮಸಾಲೆಯೊಂದಿಗೆ ಬರೀ ಅನ್ನವನ್ನು ತಿನ್ನುವ ರೂಢಿ ಮಾಡಿಕೊಂಡಿದ್ದೇವೆ. ಇದು ತಪ್ಪು. ಹಿಂದಿನವರ ಆಹಾರದಲ್ಲಿಯೂ ಸಹ ಎಲ್ಲೂ ಬರೀ ಅನ್ನವಿರಲಿಲ್ಲ. ವೈವಿಧ್ಯಮಯವಾದ ಸೊಪ್ಪು-ತರಕಾರಿಗಳು, ಹಣ್ಣುಗಳು, ಹಾಲು ಇತ್ಯಾದಿಗಳಿದ್ದವು.

ಕೆಂಪಕ್ಕಿಯ ತಿನಿಸುಗಳು :
೧) ಕೆಂಪಕ್ಕಿಯ ಅನ್ನ : ೧ ಪಾವು ಅಕ್ಕಿಗೆ ೨ ಪಾವು ನೀರಿಟ್ಟು ಕುಕ್ಕರಿನಲ್ಲಾಗಲಿ, ಬೇರೆ ಪಾತ್ರೆಯಲ್ಲಾಗಲಿ ನೀರನ್ನು ಇಂಗಿಸಿ ಬೇಯಿಸುವುದು.
೨) ಗಂಜಿ ಅನ್ನ : ಅನ್ನಕ್ಕೆ ಕೊಂಚ ಹೆಚ್ಚು ನೀರಿಟ್ಟು, ಅಂದರೆ ೧ ಪಾವು ಅಕ್ಕಿಗೆ ೩ ಪಾವು ನೀರಿಟ್ಟು ಅದನ್ನು ಗಂಜಿ ಸಮೇತವಾಗಿ ಬಿಸಿಬಿಸಿಯಾಗಿ ಬಡಿಸಿ ಸ್ವಲ್ಪ ಉಪ್ಪು ಮತ್ತು ಕಡೆದ ಮಜ್ಜಿಗೆಯೊಂದಿಗೆ ತಿನ್ನುವುದು. ಇದು ಉಷ್ಣವನ್ನು ಕಡಿಮೆ ಮಾಡುವುದು.
೩) ರಾತ್ರಿ ಮಾಡಿದ ಅನ್ನವನ್ನು ಕೊಂಚ ತಣ್ಣೀರಿನಲ್ಲಿಟ್ಟು ಬೆಳಗ್ಗೆ ಆ ನೀರು ಸಮೇತ ಕಿವಿಚಿ, ಸ್ವಲ್ಪ ಉಪ್ಪು, ಕೊಂಚ ಗಟ್ಟಿ ಮಜ್ಜಿಗೆ ಹಾಕಿ ಕುಡಿಯುವುದು. ಶರೀರಕ್ಕೆ ತಂಪು.
೪) ೨೫೦ ಗ್ರಾಂ ಅಕ್ಕಿ + ೨೫ ಗ್ರಾಂ ಗೋಧಿಯ ಮೊಳಕೆ ಸೇರಿಸಿ ಅನ್ನ ಮಾಡಿದರೆ ರುಚಿಯಾಗಿರುವುದರ ಜೊತೆಗೆ ಅಗಿಯಲು ಅನುಕೂಲಕರ. ಕೆಂಪಕ್ಕಿ ಸಿಕ್ಕದಿದ್ದಾಗ ಬಿಳಿಯ ಅಕ್ಕಿಯೊಂದಿಗೆ ಗೋಧಿಯ ಮೊಳಕೆಯನ್ನು ಹಾಕಿ ಅನ್ನ ಮಾಡಿದರೆ ಅಕ್ಕಿಯಲ್ಲಿ ಕಳೆದುಕೊಂಡ ನಾರನ್ನು ಗೋಧಿಯಲ್ಲಿ ಪಡೆಯಬಹುದು.
೫) ೨೫೦ ಗ್ರಾಂ ಅಕ್ಕಿ + ೫೦ ಗ್ರಾಂ ಹೆಸರು ಕಾಳು ಮೊಳಕೆ. ಅನ್ನ ಮೇಲಿನಂತೆಯೇ.
೬) ೨೫೦ ಗ್ರಾಂ ಅಕ್ಕಿ + ೧೦೦ ಗ್ರಾಂ ಹಲಸಂದೆ(ಕಾರಾಮಣಿ) ಕಾಳು ಮೊಳಕೆ ಅನ್ನ ಮಾಡಿ.
ವಿ.ಸೂ : ಸಣ್ಣ ಮೊಳಕೆಗಳಿರುವಾಗಲೇ ಅಕ್ಕಿಯೊಂದಿಗೆ ಬೆರೆಸಿ ಅನ್ನಕ್ಕಿಡಿ.
೭) ಮೊಳಕೆಕಾಳುಗಳ ಹುಗ್ಗಿ : ಬೇಕಾಗುವ ಪದಾರ್ಥಗಳು : ಕೆಂಪಕ್ಕಿ ೨೫೦ ಗ್ರಾಂ, ಕಾರಾಮಣಿ ಕಾಳು ಮೊಳಕೆ ೫೦ ಗ್ರಾಂ, ಹೊಟ್ಟಿನ ಸಮೇತ ಇರುವ ಹೆಸರುಬೇಳೆ ೧೫೦ ಗ್ರಾಂ, ಬಟಾಣಿ ಮೊಳಕೆ ೨೫ ಗ್ರಾಂ, ಹೆಸರುಕಾಳು ಮೊಳಕೆ ೫೦ ಗ್ರಾಂ, ಮೆಣಸು, ಜೀರಿಗೆ ೧ ಚಮಚ, ಕಡ್ಲೇಕಾಳು ಮೊಳಕೆ ೨೫ ಗ್ರಾಂ, ಹಸಿಶುಂಠಿ ಚೂರು ೧ಚಮಚ, ಗೋಧಿ ಮೊಳಕೆ ೨೫ ಗ್ರಾಂ, ಕಾಯಿತುರಿ ೧ ಹೋಳು, ಅರಿಶಿನದ ಪುಡಿ ೧ ಚಮಚ, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ : ಮೊದಲು ಅಕ್ಕಿ, ಹೆಸರುಬೇಳೆಗಳನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಳ್ಳಬೇಕು. ಮೇಲೆ ಹೇಳಿದ ಎಲ್ಲಾ ಕಾಳುಗಳನ್ನೂ ಸಣ್ಣ ಮೊಳಕೆಗಳನ್ನಾಗಿ ನಾಡಿಕೊಳ್ಳಬೇಕು. ಎಲ್ಲವನ್ನೂ ಸೇರಿಸಿ ೩ ಲೋಟ(೩ ಪಾವು) ನೀರನ್ನಿಟ್ಟು ಕುಕ್ಕರಿನಲ್ಲಿ ಬೇಯಿಸಬೇಕು(ಹೊರಗಡೆಯೂ ಬೇಯಿಸಬಹುದು). ನಂತರ ಉಪ್ಪು ಬೆರೆಸಿ ಬಡಿಸುವುದು.
೮) ತರಕಾರಿಯ ಹುಗ್ಗಿ : ಬೇಕಾಗುವ ಪದಾರ್ಥಗಳು : ಕೆಂಪಕ್ಕಿ ೨೫೦ ಗ್ರಾಂ, ಹೊಟ್ಟಿನ ಹೆಸರುಬೇಳೆ ೧೫೦ ಗ್ರಾಂ, ಆಲೂಗೆಡ್ಡೆ ೨(ದೊಡ್ಡದು), ಹುರುಳೀಕಾಯಿ ೧೦೦ ಗ್ರಾಂ, ಟೊಮೇಟೋ ೨(ಸಣ್ಣದು), ತೊಂಡೇಕಾಯಿ ೫೦ ಗ್ರಾಂ, ದೊಣ್ಣೇಮೆಣಸಿನಕಾಯಿ ೧, ಕ್ಯಾರಟ್ ೫೦ ಗ್ರಾಂ, ಗೆಡ್ಡೆ ಕೋಸು ೧, ಸೀಮೇಬದನೆ ೧ ದೊಡ್ಡದು, ಹೂಕೋಸು ಸ್ವಲ್ಪ, ಶುಂಠಿ ಚೂರು ೧ ಚಮಚ, ಸೊಪ್ಪುಗಳು : ಮೆಂಥ್ಯ, ಸಬ್ಬಸಿಗೆ, ಪಾಲಾಕ್, ಪುದಿನಾ, ಕೊತ್ತಂಬರಿ, ಕರಿಬೇವು, ಅರಿಶಿನಪುಡಿ ೧ ಚಮಚ, ತೆಂಗಿನಕಾಯಿ ಅರ್ಧ ಹೋಳು, ಜೀರಿಗೆ, ಮೆಣಸಿನಪುಡಿ ೧ ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ : ಹಿಂದಿನಂತೆಯೇ. ಒಗ್ಗರಣೆ ಹಾಕಿಕೊಳ್ಳಬಹುದು. ತುಪ್ಪ ಮೊಸರಿನೊಂದಿಗೆ ತಿನ್ನಲು ರುಚಿಯಾಗಿರುತ್ತದೆ.
(೭) ರಲ್ಲಿ ಹೇಳಿದ ಮೊಳಕೆ ಕಾಳುಗಳು (೮) ರಲ್ಲಿ ಹೇಳಿದ ತರಕಾರಿಗಳು ಎರಡನ್ನೂ ಸೇರಿಸಿ ಹುಗ್ಗಿಯನ್ನು ತಯಾರಿಸಿಕೊಳ್ಳಬಹುದು. ಮೊಳಕೆಯ ಕಾಳುಗಳು ಜೀರ್ಣಕ್ರಿಯೆಯ ವೇಗವನ್ನು ಹೆಚ್ಚಿಸುತ್ತವೆ. ತರಕಾರಿಗಳು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತವೆ. ಇವೆರಡರಲ್ಲೂ ಇರುವ ನಾರು-ಬೇರುಗಳು ಕರುಳನ್ನು ಶುಚಿಗೊಳಿಸುತ್ತವೆ. ಮೊಳಕೆಯ ಕಾಳುಗಳನ್ನು ಉಪಯೋಗಿಸುವುದರಿಂದ ಖರ್ಚು ಕಡಿಮೆಯಾಗುತ್ತದೆ. ಮೊಳಕೆ ಕಾಳುಗಳು, ತರಕಾರಿಗಳು ಯಾವುದನ್ನೂ ಹಾಕದೆ ಬರೀ ಕರೀಮೆಣಸು, ಜೀರಿಗೆ ಹುಗ್ಗಿಯನ್ನು ಮಾಡಿದರೆ ಅದನ್ನು ಖಾರದ ಪೊಂಗಲ್ ಅನ್ನುವರು.
೯) ತುಪ್ಪಾನ್ನ(ಘೀ ರೈಸ್): ಬೇಕಾಗುವ ಪದಾರ್ಥಗಳು : ಕೆಂಪಕ್ಕಿ ೨೫೦ ಗ್ರಾಂ, ಮೆಣಸಿನಕಾಯಿ ೨, ಉದ್ದಿನಹಪ್ಪಳ ೫, ಉದ್ದಿನಬೇಳೆ ೨ ಚಮಚ, ಇಂಗು ೧ ಹರಳು, ತುಪ್ಪ ೧ ಟೇಬಲ್ ಚಮಚ, ತೆಂಗಿನ ಕಾಯಿ ತುರಿ ೫೦ ಗ್ರಾಂ, ಜೀರಿಗೆ ಅರ್ಧ ಚಮಚ.
ಮಾಡುವ ವಿಧಾನ : ಅನ್ನ ಮಾಡಿಟ್ಟುಕೊಳ್ಳುವುದು. ತುಪ್ಪದಲ್ಲಿ ಸಾಸುವೆ ಒಗ್ಗರಣೆ ಮಾಡಿ ಅದಕ್ಕೆ ಉದ್ದಿನಬೇಳೆ ಹಾಕಿ ಅದು ಕೆಂಪಗಾಗುವವರೆಗೂ ಹುರಿದು ನಂತರ ಮೆಣಸಿನ ಕಾಯಿ, ಇಂಗು ಇತ್ಯಾದಿಗಳನ್ನು ಹಾಕಬೇಕು. ಸುಟ್ಟ ಹಪ್ಪಳದ ಚೂರುಗಳು, ಉಪ್ಪು, ತುಪ್ಪ, ತೆಂಗಿನ ತುರಿ ಹಾಕಿ ಚೆನ್ನಾಗಿ ಕಲಸಬೇಕು.
೧೦) ಮೊಸರನ್ನ : ಬೇಕಾಗುವ ಪದಾರ್ಥಗಳು : ಕೆಂಪಕ್ಕಿ ೨೫೦ ಗ್ರಾಂ, ತೆಂಗಿನ ಕಾಯಿ ಕಾಲು ಹೋಳು, ಹಲಸಂದೆಯ ಮೊಳಕೆ ೧೨೫ ಗ್ರಾಂ, ಒಗ್ಗರಣೆ ಮೊಸರು.
ಮಾಡುವ ವಿಧಾನ : ಅಕ್ಕಿ, ಸಣ್ಣ ಮೊಳಕೆಯ ಹಲಸಂದೆಯ ಕಾಳು, ಎರಡನ್ನೂ ಒಟ್ಟಿಗೆ ಇಟ್ಟು ಅನ್ನ ಮಾಡಬೇಕು. ಅದನ್ನು ಆರಿ ಹಾಕಿ, ಆರಿದ ಮೇಲೆ ತೆಂಗಿನ ತುರಿ, ಒಗ್ಗರಣೆ, ಮೊಸರು ಹಾಕಿ ಕಲಸಬೇಕು. ಹಲಸಂದೆಯ ಮೊಳಕೆಯೇ ಏಕೆ? ಬೆರೆಯ ಮೊಳಕೆಗಳಿಗಿಂತ ಅನ್ನದ ಜೊತೆ ಹೆಚ್ಚು ಹೊಂದಿಕೊಳ್ಳುತ್ತದೆ.
೧೧) ಹಸಿಯ ತರಕಾರಿಯ ಅನ್ನ : ಬೇಕಾಗುವ ಪದಾರ್ಥಗಳು : ಕ್ಯಾರಟ್ ೫೦ ಗ್ರಾಂ, ಸೌತೇಕಾಯಿ ಅರ್ಧ, ಬೀಟ್ರೂಟ್ ೨೫ ಗ್ರಾಂ, ತೆಂಗಿನಕಾಯಿ ಕಾಲು, ಗೆಡ್ಡೇಕೋಸು ೧, ಕೆಂಪಕ್ಕಿ ೨೫೦ ಗ್ರಾಂ.
ಮಾಡುವ ವಿಧಾನ : ಎಲ್ಲಾ ತರಕಾರಿಗಳನ್ನೂ ತೆಂಗನ್ನೂ ತುರಿದಿಟ್ಟುಕೊಳ್ಳಿ, ಅನ್ನ ಮಾಡಿ ಆರಿಸಿ ಅದಕ್ಕೆ ಹಸಿ ತರಕಾರಿಗಳ ತುರಿ ಮತ್ತು ತೆಂಗಿನ ತುರಿಯನ್ನು ಹಾಕಿ, ಕಲಸಬೇಕು. ತಿನ್ನಲಿಕ್ಕೆ ಬೇಕೆನಿಸಿದರೆ ಉಪ್ಪು ಹಾಕಿ, ಇಲ್ಲದಿದ್ದರೆ ಹಾಗೆಯೇ ತಿನ್ನಿ. ಇನ್ನೂ ರುಚಿ ಬೇಕಾದರೆ ಒಗ್ಗರಣೆ, ಮೊಸರು ಎಲ್ಲಾ ಹಾಕಿಕೊಳ್ಳಿ.
೧೨) ಹಸಿಯ ತರಕಾರಿಯ ರಸದ ಅನ್ನ : ಕೆಂಪಕ್ಕಿ ೨೫೦ ಗ್ರಾಂ + ಎರಡು ಗ್ಲಾಸ್ ನೀರಿನ ಬದಲು - ಒಂದು ಗ್ಲಾಸ್ ನೀರು, ಮತ್ತೊಂದು ಗ್ಲಾಸ್ ಕ್ಯಾರಟ್ ರಸ, ಬೀಟ್ ರೂಟ್ ರಸ, ಸೌತೇಕಾಯಿ ರಸ, ಅನ್ನಕ್ಕಿಡಿ.
ಅಥವಾ ಮೇಲಿನ ರಸಗಳನ್ನು ತೆಗೆದು ಅದಕ್ಕೆ ಒಗ್ಗರಣೆ, ಕಾಯಿರಸ ಎಲ್ಲವನ್ನೂ ಹಾಕಿ. ಅನ್ನವನ್ನು ಮಾಮೂಲಿನಂತೆ ಮಾಡಿ, ಸಾರಿಗೆ ಬದಲು ಈ ರಸವನ್ನು ಹಾಕಿಕೊಂಡು ಊಟ ಮಾಡಿ. ( ಬೇಕಿದ್ದಲ್ಲಿ ಉಪುಉ).
೧೩) ಕ್ಯಾರಟ್-ನಿಂಬೆ ಚಿತ್ರಾನ್ನ : ಬೇಕಾಗುವ ಪದಾರ್ಥಗಳು : ಕೆಂಪಕ್ಕಿ ೨೫೦ ಗ್ರಾಂ, ಒಣಮೆಣಸಿನಕಾಯಿ ೩-೪, ಅರಿಶಿಣ ೧ ಚಮಚ, ಕ್ಯಾರಟ್ ೧೦೦ ಗ್ರಾಂ, ನಿಂಬೆಹಣ್ಣು ೧ ದೊಡ್ಡದು, ಕರಿಬೇವು, ಕೊತ್ತಂಬರಿ, ತೆಂಗಿನಕಾಯಿ ೫೦ ಗ್ರಾಂ, ಸಾಸುವೆ ಕಾಲು ಚಮಚ, ಕಡಲೇಕಾಯಿಬೀಜ ೨೦ ಗ್ರಾಂ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ : ಅನ್ನ ಮಾಡಿಕೊಂಡು ಅದನ್ನು ಒಂದು ದೊಡ್ಡ ತಟ್ಟೆಯ ಮೇಲೆ ಆರಲು ಹಾಕಿ, ತೆಂಗಿನಕಾಯಿ ತುರಿ, ಒಣ ಮೆಣಸಿನಕಾಯಿ, ಸಾಸುವೆ, ಎಲ್ಲಾ ನುಣ್ಣಗೆ ರುಬ್ಬಿಕೊಂಡು ಅದನ್ನು ಅನ್ನದ ಮೇಲೆ ಹಾಕಿ, ಒಗ್ಗರಣೆ, ಸಣ್ಣಗೆ ಹೆಚ್ಚಿಕೊಂಡ ಕೊತ್ತಂಬರಿ, ನಿಂದೆರಸ, ಕ್ಯಾರಟ್ ತುರಿಯನ್ನು ಅದರ ಮೇಲೆ ಹಾಕಿ ಚೆನ್ನಾಗಿ ಕಲಸಿ.
ಹಾಗೆಯೇ ಬೀಟ್ ರೂಟ್-ನಿಂಬೆ ಚಿತ್ರಾನ್ನ ಮಾಡಬಹುದು. ನಿಂಬೆಹಣ್ಣಿಗೆ ಬದಲು ಮಾವಿನಕಾಯಿಯನ್ನು ತುರಿದು ಹುಳಿಗಾಗಿ ಬಳಸಬಹುದು. ಅಥವ ಟೋಮೇಟೋವನ್ನಾದರೂ ಬಳಸಬಹುದು. ಅಥವ ನಿಂಬೆ, ಟೊಮೇಟೋ ಎರಡನ್ನು ಸೇರಿಸಬಹುದು.
೧೪) ಮೊಳಕೆ ಕಾಳುಗಳ ಬಿಸಿಬೇಳೇ ಭಾತ್ : ಬೇಕಾಗುವ ಪದಾರ್ಥಗಳು : ಕೆಂಪಕ್ಕಿ ೨೫೦ ಗ್ರಾಂ, ಹೆಸರುಕಾಳು ಮೊಳಕೆ ೨೫ ಗ್ರಾಂ, ಹೀರೇಕಾಯಿ ೧೦೦ ಗ್ರಾಂ, ಗೋಧಿ ಮೊಳಕೆ ೨೦ ಗ್ರಾಂ, ತೊಗರೀಬೇಳೆ ೧೦೦ ಗ್ರಾಂ, ಹಲಸಂದೇಕಾಳು ಮೊಳಕೆ ೧೦೦ ಗ್ರಾಂ, ಹುರುಳೀಕಾಯಿ ೫೦ ಗ್ರಾಂ, ಬಟಾಣಿ ಮೊಳಕೆ ೫೦ ಗ್ರಾಂ, ಗೆಡ್ಡೆಕೋಸು ೧, ಕಡ್ಲೇಕಾಳು ಮೊಳಕೆ ೨೫ ಗ್ರಾಂ, ಕ್ಯಾರಟ್ ೧೦೦ ಗ್ರಾಂ, ಕಡಲೇಕಾಯಿಬೀಜದ ಮೊಳಕೆ ೫೦ ಗ್ರಾಂ, ತೊಂಡೇಕಾಯಿ ೫೦ ಗ್ರಾಂ, ಕಡಲೇಬೇಳೆ, ಉದ್ದಿನಬೇಳೆ ೧ ಚಮಚ, ಸೀಮೇಬದನೆ ೧, ಎಣ್ಣೆ ೧೦೦ ಗ್ರಾಂ, ಕೊತ್ತಂಬರಿಬೀಜ ೨ ಚಮಚ, ಹೂಕೋಸು ೧, ಸುವರ್ಣಗೆಡ್ಡೆ ೧೦೦ ಗ್ರಾಂ, ಜಾಯಿಕಾಯಿ, ಜಾಪತ್ರೆ, ಅನಾನಸ್ ಹೂ ಸ್ವಲ್ಪ, ಒಣಮೆಣಸಿನಕಾಯಿ ೧೦, ಕೊಬ್ಬರಿ ಅರ್ಧ ಹೋಳು, ಚಕ್ಕೆ = ಲವಂಗ = ಮೊಗ್ಗು = ೪, ಬೆಲ್ಲ ೨ ಸಣ್ಣ ಉಂಡೆ, ಸಾಸುವೆ = ಗಸಗಸೆ = ೧ ಚಮಚ ತೆಂಗಿನಕಾಯಿ ಅರ್ಧ ಹೋಳು, ಹುಣಿಸೇಹಣ್ಣು ೨೦ ಗ್ರಾಂ, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ : ಸಾಂಬಾರ್ ಪದಾರ್ಥಗಳನ್ನು ಹುರಿದುಕೊಂಡು ಕಾಯಿ, ಕೊಬ್ಬರಿಯೊಂದಿಗೆ ರುಬ್ಬಿಕೊಳ್ಳುವುದು. ಬೇಲೆ, ಮೊಳಕೆಯ ಕಾಳುಗಳು, ಮತ್ತು ತರಕಾರಿ ಬೇಯಿಸಿ ಇಟ್ಟುಕೊಳ್ಳುವುದು. ಹುಣಿಸೇ ರಸ, ಬೆಲ್ಲ, ಉಪ್ಪು, ರುಬ್ಬಿದ ಮಿಶ್ರಣ, ಬೆಂದ ಬೇಳೆಕಾಳುಗಳು, ತರಕಾರಿಗಳೊಂದಿಗೆ ಸೇರಿಸಿ ಒಲೆಯ ಮೇಲಿಟ್ಟು ಸ್ವಲ್ಪ ನೀರು ಹಾಕಿ ಕುದಿಸುವುದು.
ಅಕ್ಕಿಯನ್ನು ಬೇರೆಯಾಗಿ ಬೇಯಿಸಿ ಅನ್ನ ಮಾಡಿಕೊಳ್ಳುವುದು, ಒಲೆಯ ಮೇಲಿಟ್ಟ ಹುಳಿ ಚೆನ್ನಾಗಿ ಕುದಿ ಬಂದ ಮೇಲೆ ಈ ಅನ್ನವನ್ನು ನಿಧಾನವಾಗಿ ಹಾಕುತ್ತಾ ಕಲಕುತ್ತಿರಬೇಕು.( ತಳಹತ್ತದಂತೆ ನೋಡಿಕೊಳ್ಳುವುದು) ಆರಿದ ಮೇಲೆ ಗಟ್ಟಿಯಾಗುವ ಪ್ರಯುಕ್ತ ಕೊಂಚ ನೀರು ಹೆಚ್ಚಿರುವುದು ಉತ್ತಮ.
ಎಣ್ಣೆ, ಸಾಸುವೆ, ಇಂಗು, ಕೊತ್ತಂಬರಿ, ಕರಿಬೇವು ಎಲ್ಲದರ ಒಗ್ಗರಣೆ(ಬೇಕಾದರೆ ಈರುಳ್ಳಿ, ಬೆಳ್ಳುಳ್ಳಿ) ಮಾಡಿ ಹಾಕಬಹುದು. ಕೊಂಚ ಆರಿದ ನಂತರ ಉಳಿದ ಎಣ್ಣೆಯನ್ನು ಕಾಯಿಸಿ ಹಾಕಿ ಕೆದಕುವುದು.
'ಬಿ ಕ್ಯೂಬ್' ಎಂದೇ ಪ್ರಸಿದ್ಧವಾಗಿರುವ ಬಿಸಿಬೇಳೇಭಾತ್ ಜೀರ್ಣಕ್ಕೆ ಬಹಳ ಜಡ. ಸಿಮೆಂಟ್ ಕಾಂಕ್ರ್‍ಈಟ್ ನಂತೆ ಹೊಟ್ಟೆಯಲ್ಲಿ ಗಟ್ಟಿಯಾಗಿ ಕುಳಿತುಬಿಡುತ್ತದೆ. ಆದರೆ ಮೇಲೆ ಹೇಳಿರುವುದರಲ್ಲಿ ತರಕಾರಿಗಳು, ಮೊಳಕೆ ಕಾಳುಗಳು ಬಿದ್ದಿರುವುದರಿಂದ ಜೀರ್ಣಕ್ಕೆ ಹಗುರ. ನೀವೂ ಮಾಡಿ ತಿಂದು ನೋಡಿ.
೧೫) ಪಲಾವ್ : ತರಕಾರಿಗಳು ಮತ್ತು ಮೊಳಕೆಯ ಕಾಳುಗಳನ್ನು ಹಾಕುವುದರಿಂದ ಜೀರ್ಣಕ್ಕೆ ಸುಲಭವಾಗುತ್ತದೆ. ಬೇಕಾಗುವ ಪದಾರ್ಥಗಳು : ಕೆಂಪಕ್ಕಿ ೨೫೦ ಗ್ರಾಂ, ಮೊಳಕೆ ಕಾಳುಗಳು : ಬಟಾಣು ೫೦ ಗ್ರಾಂ, ಕಡ್ಲೇಕಾಳು ೫೦ ಗ್ರಾಂ, ಗೋಧಿ ೨೫ ಗ್ರಾಂ, ತೊಗರೀಕಾಳು ೫೦ ಗ್ರಾಂ, ಅವರೇಕಾಳು ೫೦ ಗ್ರಾಂ, ತರಕಾರಿಗಳು : ಕ್ಯಾರಟ್, ಗೆಡ್ಡೇಕೋಸು, ಹುರಳಿಕಾಯಿ, ಗೋರೀಕಾಯಿ. ಮಸಾಲೆ ಪದಾರ್ಥಗಳು : ಚಕ್ಕೆ ೧೦ ಗ್ರಾಂ, ಲವಂಗ ೫ ಗ್ರಾಂ, ಏಲಕ್ಕಿ ೧೦, ಅನಾನಸ್ ಮೊಗ್ಗು ಅರ್ಧ ಕಲ್ಲು ಹೂ, ಎಲೆ ೧ ಪ್ಯಾಕೆಟ್, ತೆಂಗಿನಕಾಯಿ ೧, ಶುಂಠಿ, ಅಚ್ಚಮೆಣಸಿನಪುಡಿ, ೩ ಚಮಚ, ಕೊತ್ತಂಬರಿ ಸೊಪ್ಪು, ಸೋಂಪು ೨ ಚಮಚ, ಕಂದು ಬ್ರೆಡ್ ೬ ಸ್ಲೈಸ್, ಪುದೀನ, ಉಪ್ಪು.

ಮಾಡುವ ವಿಧಾನ : ಮಸಾಲೆಯ ಪುಡಿ, ಕೊತ್ತಂಬರಿ, ಪುದೀನ ಕಾಯಿತುರಿಯ ಜೊತೆ ರುಬ್ಬುಕೊಳ್ಳುವುದು. ಮೊಳಕೆಯ ಕಾಳುಗಳು, ತರಕಾರಿಗಳನ್ನು ಕುಕ್ಕರಿನಲ್ಲಿ ಬೇಯಿಸಿಕೊಳ್ಳುವುದು. ನಂತರ ಬಾಂಡಲೆಗೆ ೨ ಚಮಚ ಎಣ್ಣೆ ಹಾಕಿಕೊಂಡು, ಮೆಣಸಿನ ಪುಡಿ, ಬೆಂದ ತರಕಾರಿ ಎಲ್ಲವನ್ನೂ ಹಾಕಿ ಕುದಿಸುವುದು(ಸುಮಾರು ಎರಡು ನಿಮಿಷ). ಅನಾವನ್ನು ಬೇರೆ ಮಾಡಿಕೊಂಡು ಅದನ್ನು ಬಾಂಡಲೆಗೆ ಹಾಕಿ ಮೊತ್ತೊಮ್ಮೆ ಸಣ್ಣ ಉರಿಯಲ್ಲಿ ಕೆದಕುವುದು. ಆಮೇಲೆ ಬ್ರೆಡ್ ತುಂಡುಗಳನ್ನು ತುಪ್ಪದಲ್ಲಿ ಹುರಿದು ಪಲಾವ್ ಗೆ ಬೆರೆಸುವುದು.
ವಿ.ಸೂ. ಪಲಾವ್ ಎಲೆಗಳನ್ನು ರುಬ್ಬಿಕೊಳ್ಳುವುದು ಉತ್ತಮ. ಮಿಕ್ಸಿಗೆ ಹಾಕಿದರೆ ತುಂಬಾ ನುಣ್ಣಗೆ ಆಗುತ್ತದೆ. ಅಷ್ಟೊಂದು ನುಣ್ಣಗಾದರೆ ಚೆನ್ನಾಗಿರುವುದಿಲ್ಲ.
ಪಲಾವ್ ಗೆ ನಂಚಿಕೊಳ್ಳಲು ರಾಯತ :
೧) ಕಾಯಿ ತುರಿ + ಈರುಳ್ಳಿ + ಹಸಿರು ಮೆಣಸಿನಕಾಯಿ-ರುಬ್ಬಿಕೊಳ್ಳಬೇಕು, ಸೌತೇಕಾಯಿ ಹೆಚ್ಚಿ ಹಾಕಿ, ಉಪ್ಪು, ಕೊತ್ತಂಬರಿ, ಮೊಸರು ಹಾಕಬೇಕು.
೨) ಕಾಯಿ ತುರಿ + ಮೆಣಸು + ಈರುಳ್ಳಿ - ರುಬ್ಬಿಕೊಂಡು ಮೊಸರು, ಉಪ್ಪು, ಟೊಮೇಟೋ ಹಾಕಿ.
೩) ಈರುಳ್ಳಿಯ ಬದಲು ಮೂಲಂಗಿಯನ್ನು ಬಳಸಿ.

೧೬) ವಾಂಗೀಭಾತ್ : ಇದೂ ಸಹ ರುಚಿಗಾಗಿ ಮಾಡುವ ವಸ್ತುವೇ. ರುಚಿಯನ್ನು ಬಯಸುವುದು ತಪ್ಪಲ್ಲ. ಆದರೆ, ಯಾವಾಗಲೂ ಅದರ ದಾಸರಾಗಬಾರದಷ್ಟೆ. ಒಮ್ಮೊಮ್ಮೆ ತಿಂದರೆ ರುಚಿಯೂ ಹೆಚ್ಚು ತೊಂದರೆಯೂ ಕಡಿಮೆ. ಬೇಕಾಗುವ ಪದಾರ್ಥಗಳು : ಕೆಂಪಕ್ಕಿ ೨೫೦ ಗ್ರಾಂ, ಮೊಳಕೆಗಳು : ಗೋಧಿ, ಹೆಸರು, ಬಟಾಣಿ, ಕಡ್ಲೇಕಾಲು. ಬದನೇಕಾಯಿ ಅರ್ಧ ಕಿ.ಗ್ರಾಂ, ಉದ್ದಿನಬೇಳೆ ೧ ಚಮಚ, ಕಡ್ಲೇಬೇಳೆ ೧ ಚಮಚ, ಒಣಮೆಣಸಿನಕಾಯಿ ೧೦, ಕೊತ್ತಂಬರಿ ಬೀಜ ೧ ಚಮಚ, ಸಾಸುವೆ, ಲವಂಗ, ಚಕ್ಕೆ ೫-೬, ಕೊಬ್ಬರಿ ೧೦೦ ಗ್ರಾಂ, ಎಣ್ಣೆ ೧೫೦ ಗ್ರಾಂ.
ಮಾಡುವ ವಿಧಾನ : ಮಸಾಲೆ ಪದಾರ್ಥಗಳನ್ನು ಹುರಿದು ಪುಡಿ ಮಾಡಿಕೊಳ್ಳಿ. ಅನ್ನವನ್ನು ಉದುರು ಉದುರಾಗಿ ಮಾಡಿಟ್ಟುಕೊಳ್ಳಬೇಕು. ಕುಕ್ಕರಿನಲ್ಲಿ ಮೊಳಕೆಯ ಕಾಳುಗಳನ್ನು ಬೇಯಿಸಿಟ್ಟುಕೊಳ್ಳುವುದು. ಒಗ್ಗರಣೆಯಲ್ಲಿ ಬದನೇಕಾಯಿಯನ್ನು ಬೇಯಿಸಿಟ್ಟುಕೊಂಡು ಅದಕ್ಕೆ ಮಸಾಲೆ ಪುಡಿ, ಬೆಂದ ಮೊಳಕೆಯ ಕಾಳುಗಳು, ಅನ್ನ, ಹುಣಿಸೇಹುಳಿ, ಬೆಲ್ಲ, ಉಪ್ಪು ಹಾಕಿ ಕಲಸುವುದು.

ಬರೆದವರು : ಜಿ.ವಿ.ವಿ.ಶಾಸ್ತ್ರಿ
ಮನುಜಾ! ಏನು ನಿನ್ನ ಆಹಾರ ಪುಸ್ತಕದ ಕರ್ತೃ

ಸಂಗ್ರಹಿಸಿದವರು : ೧) ಸತ್ಯಪ್ರಕಾಶ್.ಹೆಚ್.ಕೆ.
೯೮೮೬೩ ೩೪೬೬೭
ಈಮೈಲ್ : ಎಸ್ಪಿ_೧೯೩೯ ಅಟ್ ಯಾಹೂ.ಕೊ.ಇನ್


೨) ಅರುಣ್. ಎಲ್.
೯೮೮೬೪ ೧೭೨೫೨
ಈಮೈಲ್ : ಪರಿಸರಪ್ರೇಮಿ ಅಟ್ ಯಾಹೂ.ಕಾಮ್
ಅರುಣ್.ಎಲ್ಲೆನ್ ಅಟ್ ಆರ್ ಹೆಚ್ ಎಮ್.ಕೊ.ಇನ್

ಕಾಮೆಂಟ್‌ಗಳಿಲ್ಲ: